ಬಿಜೆಪಿಗೆ ಓಟು ಹಾಕದ ಮುಸ್ಲಿಮರು ಪಾಕಿಸ್ತಾನದ ಪರ :ಕೆ ಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ


ಬೆಂಗಳೂರು (TOC ನ್ಯೂಸ್) : ಯಾವ ಮುಸ್ಲಿಮರು ದೇಶಭಕ್ತರಾಗಿರುತ್ತಾರೋ ಅವರು ಬಿಜೆಪಿಗೆ ಮತ ಹಾಕುತ್ತಾರೆ. ಯಾರು ಪಾಕಿಸ್ತಾನದ ಪರವಾಗಿ ಇರುತ್ತಾರೋ ಅವರು ಬಿಜೆಪಿಗೆ ಓಟು ಹಾಕುವುದಿಲ್ಲ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭಾನುವಾರ ಬೆಂಗಳೂರಿನ ಪುರಭವನ ಸಭಾಂಗಣದಲ್ಲಿ ಶ್ರೀ ರಾಮ ಸೇನೆ ಆಯೋಜಿಸಿದ್ದ ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಮಾಡಿದಕ್ಕಾಗಿ ಕೇಂದ್ರ ಸರಕಾರಕ್ಕೆ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ ನೀಡಿರುವ ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.

ನಾನು ಇದುವರೆಗೂ ನನ್ನ ಕ್ಷೇತ್ರದಲ್ಲಿ ಒಬ್ಬನೇ ಒಬ್ಬ ಮುಸ್ಲಿಮನಿಗೆ ಮತ ಹಾಕಿ ಎಂದು ಕೈ‌ಮುಗಿದು ಕೇಳಲಿಲ್ಲ ಎಂದ ಅವರು, ಮೋದಿ ಪ್ರಧಾನಿ ಆಗುವ ಮೊದಲು ಕ್ರಿಶ್ಚಿಯನ್, ಮುಸ್ಲಿಂ ರಾಷ್ಟ್ರಗಳು ಪಾಕಿಸ್ತಾನದ ಜೊತೆಗೆ ಇದ್ದವು, ಆದರೆ ಮೋದಿಯವರು ಎಲ್ಲಾ ದೇಶಗಳಿಗೆ ಭೇಟಿ ನೀಡುವ ಮೂಲಕ ಪಾಕಿಸ್ತಾನವನ್ನು ಒಂಟಿ ಮಾಡಿದ್ದಾರೆ ಎಂದರು.

ನಮ್ಮ ಸರಕಾರ ಬಂದಾಗ ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಮಾಡಿದ್ದೆವು. ಆದರೆ ಕಾಂಗ್ರೆಸ್ ಸರಕಾರ ಇದನ್ನು ರದ್ದು ಮಾಡಿತ್ತು. ಅದರೆ ನಾವು ಮತ್ತೆ ಗೋ ಹತ್ಯೆ ನಿಷೇಧ ಮಾಡೇ ಮಾಡುತ್ತೇವೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

ಪ್ರಪಂಚ ಮೆಚ್ಚುವ ಗಂಡುಗಲಿ ಪ್ರಧಾನಿಗೆ ಅಭಿನಂದನೆ ಸಲ್ಲಿಸೊದು ಖುಷಿಯ ವಿಚಾರ ಎಂದ ಅವರು, ಇವತ್ತು ಇಲ್ಲ ನಾಳೆ ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗ ಆಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.


Previous Post
Next Post

0 Post a Comment: